7ನೇ ರಾಜ್ಯ ವೇತನ ಆಯೋಗಕ್ಕೆ ಸಂಬಂಧಿಸಿದ ಆದೇಶಗಳ ಸಾರಾಂಶ

 7ನೇ ರಾಜ್ಯ ವೇತನ ಆಯೋಗ ರಚನೆ ಆದಾಗಿನಿಂದ ಹಂತ ಹಂತವಾಗಿ ಹೊರಡಿಸಲಾದ ಸರ್ಕಾರದ ಆದೇಶಗಳು (ಆದೇಶ ಸಂಖ್ಯೆ ಮತ್ತು ದಿನಾಂಕಗಳೊಂದಿಗೆ) ಮತ್ತು ವರದಿಯ ಸಾರಾಂಶವನ್ನು ಇಲ್ಲಿ ವಿವರಿಸಲಾಗಿದೆ.

    ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು 7ನೇ ರಾಜ್ಯ ವೇತನ ಅಯೋಗವನ್ನು ರಚಿಸುವ ಬಗ್ಗೆ ಅಂದಿನ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಆಗಿದ್ದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು ದಿ:09/11/2024ರಂದು ಘೋಷಿಸುತ್ತಾರೆ.

 

ಮಾಜಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ

ಅದರಂತೆ, ರಾಜ್ಯ ಸರ್ಕಾರವು ಸರ್ಕಾರಿ ಆದೇಶ ಸಂಖ್ಯೆ: ಆಇ 45 ಎಸ್‌ಆರ್‌ಪಿ 2022, ದಿ:19-11-2022ರನ್ವಯ ಶ್ರೀ ಸುಧಾಕರ್‌ ರಾವ್‌, ಭಾ.ಆ.ಸೇ, ನಿವೃತ್ತ ಮುಖ್ಯ ಕಾರ್ಯದರ್ಶಿ ಇವರ ಅಧ್ಯಕ್ಷತೆಯಲ್ಲಿ 7ನೇ ರಾಜ್ಯ ವೇತನ ಅಯೋಗವನ್ನು ರಚಿಸಿತು.

ಈ ಅಯೋಗವು ಶ್ರೀ ಪಿ.ಬಿ. ರಾಮಮೂರ್ತಿ, ಭಾ.ಆ.ಸೇ. (ನಿ) ಹಾಗೂ ಶ್ರೀ ಶ್ರೀಕಾಂತ್‌ ಬಿ ವನಹಳ್ಳಿ, ಪ್ರಧಾನ ನಿರ್ದೇಶಕರು (ನಿ), ರಾಜ್ಯ ಲೆಕ್ಕಪತ್ರ ಇಲಾಖೆ ಇವರುಗಳನ್ನು ಸದಸ್ಯರಾಗಿ ಮತ್ತು ಶ್ರೀಮತಿ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಭಾ.ಆ.ಸೇ. ಜಂಟಿ ಕಾರ್ಯದರ್ಶಿ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಇವರನ್ನು ಕಾರ್ಯದರ್ಶಿಯಾಗಿ ಒಳಗೊಂಡಿತ್ತು.

ಈ ಆದೇಶವು ಈ ಕೆಳಕಂಡ ಅಂಶಗಳನ್ನು ಒಳಗೊಂಡಿತ್ತು.

ಆಯೋಗವು ತನ್ನ ಶಿಫಾರಸ್ಸುಗಳನ್ನು ಮಾಡಬೇಕಾದಾಗ, ರಾಜ್ಯ ಸಂಪನ್ಮೂಲಗಳು, ರಾಜ್ಯ ಸರ್ಕಾರದ ಹೊಣೆಗಳು ಮತ್ತು ಇತರೆ ಅಗತ್ಯತೆಗಳನ್ನು ಗಮನದಲ್ಲಿ ಇರಿಸಿಕೊಳ್ಳುವುದು.

ಆಯೋಗವು ತನಗೆ ಅಗತ್ಯವೆನಿಸಿದ ಮಾಹಿತಿಯನ್ನು ವಿವಿಧ ಇಲಾಖೆಗಳಿಂದ ಪಡೆಯುವುದು.

ವೇತನ ಆಯೋಗವು ತನ್ನ ವರದಿಯನ್ನು 6 ತಿಂಗಳೊಳಗೆ ಸಲ್ಲಿಸುವುದು.

ಈ ಆದೇಶದ ಪ್ರಕಾರ ವೇತನ ಅಯೋಗವು ಈ ಕೆಳಕಂಡ ಅಂಶಗಳನ್ನು ಪರಿಶೀಲಿಸುವ ಕಾರ್ಯ ಹೊಂದಿತ್ತು.

  1. ರಾಜ್ಯ ಸರ್ಕಾರಿ ನೌಕರರ (ಯುಜಿಸಿ/ಎಐಸಿಟಿಇ/ಐಸಿಎಆರ್‌/ಎನ್‌ಜೆಪಿಸಿ ವೇತನ ಶ್ರೇಣಿ ಹೊಂದಿರುವವರನ್ನು ಹೊರತುಪಡಿಸಿ), ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿಗಳಿಗೆ ಆಗ ಚಾಲ್ತಿಯಲ್ಲಿದ್ದ ವೇತನ ರಚನೆಯನ್ನು(Pay structure) ಪರಿಶೀಲಿಸಿ, ಕಾರ್ಯಸಾಧ್ಯವಿರುವ ನೂತನ ವೇತನ ರಚನೆಯನ್ನು ರೂಪಿಸುವುದು.
  1. ಕೇಂದ್ರ ಸರ್ಕಾರದ ವೇತನ ರಚನೆಯನ್ನು (Cental govt pay stucture) ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಗಳ ಬಗ್ಗೆ ಪರಿಶೀಲಿಸುವುದು.
  1. ರಾಜ್ಯ ಸರ್ಕಾರವು ಅಳವಡಿಸಿಕೊಳ್ಳಬಹುದಾದ ತುಟ್ಟಿಭತ್ಯೆ(DA)ಯ ಸೂತ್ರದ ಬಗ್ಗೆ ಪರಿಶೀಲಿಸುವುದು.
  1. ಮನೆ ಬಾಡಿಗೆ ಭತ್ಯೆ(HRA- House Rent Allowance), ನಗರ ಪರಿಹಾರ ಭತ್ಯೆ (CCA– City Compensation Allowance), ವಿಶೇಷ ಭತ್ಯೆಗಳು ಹಾಗೂ ಇತರ ಭತ್ಯೆಗಳ ಬಗ್ಗೆ ಪರಿಶೀಲಿಸಿ, ಅಗತ್ಯವಾದ ಬದಲಾವಣೆಗಳನ್ನು ಸಲಹೆ ಮಾಡುವುದು.
  1. ನಿವೃತ್ತಿ ವೇತನ (Pension) ಮತ್ತು ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸುವುದು.
  1. ರಾಜ್ಯ ಸರ್ಕಾರದಿಂದ ವಹಿಸಲ್ಪಡುವ/ಸೂಚಿಸಬಹುದಾದ ಇತರೆ ವಿಷಯಗಳನ್ನು ಪರಿಶೀಲಿಸುವುದು.

ಸರ್ಕಾರಿ ಆದೇಶ ಸಂಖ್ಯೆ: ಆಇ 46 ಎಸ್‌ಆರ್‌ಪಿ 2022, ದಿ:01-12-2022ರನ್ವಯ ಅಯೋಗದ ಕಾರ್ಯನಿರ್ವಹಣೆಗೆ ಅನುಕೂಲವಾಗಲು 44 (ನಲವತ್ನಾಲ್ಕು) ಹುದ್ದೆಗಳನ್ನು ಸೃಜಿಸಲು ಸರ್ಕಾರವು ಮಂಜೂರಾತಿ ನೀಡಿತು.

ಈ ಹುದ್ದೆಗಳು ಆಯೋಗದ ಅವಧಿಯವರೆಗೆ ತಾತ್ಕಾಲಿಕವಾಗಿ ಸೃಜನೆ ಮಾಡಲಾದ ಹುದ್ದೆಗಳಾಗಿದ್ದವು.

ಆಯೋಗವು ದಿ:17-01-2023ರ ಜ್ಞಾಪನ ಪತ್ರದಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳು ಮತ್ತು ಇತರೆ ಸೇವಾ ನಿಬಂಧನೆಗಳ ಪರಿಷ್ಕರಣೆ ಕುರಿತಂತೆ ವಿವರವಾದ ಪ್ರಶ್ನಾವಳಿಗಳನ್ನು ಬಿಡುಗಡೆ ಮಾಡಿತ್ತು.

ಅದರಂತೆ, ಬಿಡುಗಡೆ ಮಾಡಿದ ಪ್ರಶ್ನಾವಳಿಗಳಿಗೆ, ಸರ್ಕಾರದ ವಿವಿಧ ಇಲಾಖೆಗಳು/ ಸಂಸ್ಥೆಗಳು, ನೌಕರರ ಸಂಘಗಳು ಮತ್ತು ಸರ್ಕಾರದ ನೌಕರರುಗಳು ಅಯೋಗಕ್ಕೆ ಉತ್ತರಗಳನ್ನು ಹಾಗೂ ಮನವಿಗಳನ್ನು ಸಲ್ಲಿಸುವಲ್ಲಿ ಅನುಸರಿಸಬೇಕಾದ ಕಾರ್ಯವಿಧಾನದ ಕುರಿತಂತೆ ಮಾರ್ಗಸೂಚಿಗಳನ್ನು ಆದೇಶ ಸಂಖ್ಯೆ: ಆಇ 45 ಎಸ್ಆರ್‌ಪಿ 2022, ದಿ:06-02-2023ರನ್ವಯ ಬಿಡುಗಡೆ ಮಾಡಿತು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತೀವ್ರ ಬೇಡಿಕೆಯ ಹಿನ್ನಲೆಯಲ್ಲಿ 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ (6th Pay) ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ ಸರ್ಕಾರದ ಆದೇಶ ಸಂಖ್ಯೆ: ಆಇ 07 ಎಸ್ಆರ್‌ಪಿ 2023, ದಿ:01-03-2023ರನ್ವಯ ದಿ:01-04-2023 ರಿಂದ ಜಾರಿಗೆ ಬರುವಂತೆ ಮೂಲ ವೇತನ (Basic Pay)ದ 17% ರಷ್ಟು ಮಧ್ಯಂತರ ಪರಿಹಾರವನ್ನು ಅಂದಿನ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಆಗಿದ್ದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರವು ಮಂಜೂರು ಮಾಡಿತು.

ಈ ಆದೇಶದ ಪ್ರಕಾರ ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ ಕುಟುಂಬ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುವಂತಹ ಅನುದಾನಿತ ಶಿಕ್ಷಣ ಸಂಸ್ಥಗಳ ನಿವೃತ್ತಿ ವೇತನದಾರರು/ ಕುಟುಂಬ ವೇತನದಾರರಿಗೆ ಸಹ ಮೂಲ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನದ 17% ರಷ್ಟು ಮಧ್ಯಂತರ ಪರಿಹಾರವು ಲಭಿಸಿತು.

ಈ ಆದೇಶವು ಸರ್ಕಾರದ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರುಗಳಿಗೆ ಅನ್ವಯಿಸಿತು.

ಸರ್ಕಾರದ ಆದೇಶ ಸಂಖ್ಯೆ: ಆಇ 45 ಎಸ್ಆರ್‌ಪಿ 2022, ದಿ:08-03-2023ರನ್ವಯ ರಾಜ್ಯ ಸರ್ಕಾರವು ಆಯೋಗದ ಪರಿಶೀಲನಾರ್ಹ ಅಂಶಗಳ ವ್ಯಾಪ್ತಿಯನ್ನು ವಿಸ್ತರಿಸಿ ಕರ್ನಾಟಕ ರಾಜ್ಯಪಾಲರ ಸಚಿವಾಲಯ, ಕರ್ನಾಟಕ ವಿಧಾನಮಂಡಲ, ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮತ್ತು ಕರ್ನಾಟಕ ಲೋಕಾಯುಕ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯನ್ನು ಸೇರಿಸಿತು.

ಸರ್ಕಾರವು 7ನೇ ರಾಜ್ಯ ವೇತನ ಅಯೋಗವನ್ನು ರಚಿಸುವ ಸಂದರ್ಭದಲ್ಲಿ(ರಚನೆ ದಿ:19-11-2022) ವೇತನ ಆಯೋಗಕ್ಕೆ 6 ತಿಂಗಳೊಳಗಾಗಿ ವರದಿಯನ್ನು ಸಲ್ಲಿಸುವಂತೆ ಆದೇಶವನ್ನು ಹೊರಡಿಸಿರುತ್ತದೆ. ಆಯೋಗ ರಚಿಸಿ 6 ತಿಂಗಳುಗಳು ಸಮೀಪಿಸುತ್ತಿದ್ದು, ಆಯೋಗವು ಇನ್ನೂ ಸಹ ವರದಿಯನ್ನು ನೀಡದೆ ಇದ್ದುದರಿಂದ ಹಾಗೂ ಆಯೋಗದ ಅವಧಿಯು ಶೀಘ್ರದಲ್ಲೇ ಮುಕ್ತಾಯವಾಗಲಿದ್ದರಿಂದ ಸರ್ಕಾರವು 7ನೇ ರಾಜ್ಯ ವೇತನ ಅಯೋಗವು ತನ್ನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಅನುಕೂಲವಾಗಲು ಸರ್ಕಾರದ ಆದೇಶ ಸಂಖ್ಯೆ: ಆಇ 45 ಎಸ್ಆರ್‌ಪಿ 2022, ದಿ:15-05-2023ರನ್ವಯ ಅಯೋಗದ ಕಾಲಾವಧಿಯನ್ನು ದಿ:19-05-2023 ರಿಂದ ಮುಂದಿನ 6 ತಿಂಗಳವರೆಗೆ ವಿಸ್ತರಿಸಿತು.

ಸರ್ಕಾರದ ಆದೇಶ ಸಂಖ್ಯೆ: ಆಇ 45 ಎಸ್ಆರ್‌ಪಿ 2022, ದಿ:15-05-2023ರನ್ವಯ ಅಯೋಗದ ಕಾಲಾವಧಿಯನ್ನು ದಿ:19-05-2023 ರಿಂದ ಮುಂದಿನ 6 ತಿಂಗಳವರೆಗೆ ಮೊದಲನೆ ಸಲ ಸರ್ಕಾರವು ವಿಸ್ತರಿಸಿತ್ತು. ಆಯೋಗವು ಇನ್ನೂ ಸಹ ವರದಿಯನ್ನು ನೀಡದೆ ಇದ್ದುದರಿಂದ ಹಾಗೂ ಆಯೋಗದ ಅವಧಿಯು ಶೀಘ್ರದಲ್ಲೇ ಮುಕ್ತಾಯವಾಗಲಿದ್ದರಿಂದ (ಅಂದರೆ ಆಯೋವು ರಚನೆಯಾಗಿ ಶೀಘ್ರದಲ್ಲೇ 1 ವರ್ಷ ಪೂರ್ಣಗೊಳ್ಳಲಿತ್ತು) ಸರ್ಕಾರವು 7ನೇ ರಾಜ್ಯ ವೇತನ ಅಯೋಗವು ತನ್ನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಅನುಕೂಲವಾಗಲು ಸರ್ಕಾರದ ಆದೇಶ ಸಂಖ್ಯೆ: ಆಇ 45 ಎಸ್ಆರ್‌ಪಿ 2022, ದಿ:06-11-2023ರನ್ವಯ ಅಯೋಗದ ಕಾಲಾವಧಿಯನ್ನು ದಿ:15-03-2024 ರವರೆಗೆ ಎರಡನೆ ಸಲ ವಿಸ್ತರಿಸಿತು.

7ನ ರಾಜ್ಯ ವೇತನ ಆಯೋಗದ ಅಧ್ಯಕ್ಷರಾದ ಶ್ರೀ ಸುಧಾಕರ್ ರಾವ್ ಅವರು ದಿ:16-03-2024 ರಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ 7ನೇ ರಾಜ್ಯ ವೇತನ  ಆಯೋಗದ ವರದಿ, ಸಂಪುಟ-1 ಅನ್ನು ಸಲ್ಲಿಸಿದರು.

7ನೇ ವೇತನ ಆಯೋಗದ ಅಧ್ಯಕ್ಷರಾದ ಶ್ರೀ ಸುಧಾಕರ್ ರಾವ್ ಅವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ವರದಿಯನ್ನು ಸಲ್ಲಿಸುತ್ತಿರುವುದು.

ವರದಿಯ ಪ್ರಮುಖ ಶಿಫಾರಸ್ಸುಗಳನ್ನು ಈ ಕೆಳಗೆ ಪಟ್ಟಿ ಮಾಡಿಲಾಗಿದೆ.

  1. ದಿನಾಂಕ: 01-07-2022ಕ್ಕೆ ಇದ್ದಂತೆ ರಾಜ್ಯ ಸರ್ಕಾರಿ ನೌಕರರ ಮೂಲ ವೇತನಕ್ಕೆ 27.50% ರಷ್ಟು ಫಿಟ್‌ಮೆಂಟ್ ಹೆಚ್ಚಿಸಲು ಶಿಫಾರಸ್ಸು.
  2. ದಿನಾಂಕ: 01-07-2022ಕ್ಕೆ ಇದ್ದಂತಹ 31% ತುಟ್ಟಿಭತ್ಯೆ ವಿಲೀನ ಹಾಗೂ ಮೇಲಿನ 27.50% ರಷ್ಟು ಸೇರಿ ಒಟ್ಟು 58.50% ರಷ್ಟು ಮೂಲ ವೇತನದಲ್ಲಿ ಹೆಚ್ಚಳ.
  3. ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ರೂ.17,000/- ರಿಂದ ರೂ.27,000/-ಕ್ಕೆ ಹಾಗೂ ಗರಿಷ್ಠ ಮೂಲ ವೇತನವನ್ನು ರೂ.1,04.600/- ರಿಂದ ರೂ.2,41,200/-ಕ್ಕೆ ಹೆಚ್ಚಳ
  4. ಸರ್ಕಾರಿ ನೌಕರರಿಗೆ ಹೊಸ ವೇತನ ಶ್ರೇಣಿ ಹಾಗೂ ಫಿಟ್‌ಮೆಂಟ್ ಸೌಲಭ್ಯವನ್ನು ದಿ:01-07-2022 ರಿಂದ ಕಾಲ್ಪನಿಕವಾಗಿ ಅನುಷ್ಠಾನಗೊಳಿಸಲು ಶಿಫಾರಸ್ಸು.
  5. ವಾರ್ಷಿಕ ವೇತನ ಬಡ್ತಿ ದರವನ್ನು ಕನಿಷ್ಠ ರೂ.400/- ರಿಂದ ರೂ.650/-ಕ್ಕೆ ಹಾಗೂ ಗರಿಷ್ಠ ರೂ.3100/- ರಿಂದ ರೂ.5,000/- ಹೆಚ್ಚಳ.
  6. ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ದಿನಾಂಕ: 01-07-2022 ರಿಂದ ಭಾರತ ಸರ್ಕಾರವು ಮಂಜೂರು ಮಾಡಿದ ಪ್ರತಿ ಶೇ.1 ರಷ್ಟು ತುಟ್ಟಿಭತ್ಯೆಗೆ ಶೇ. 0.722ರಷ್ಟು ನೀಡುವುದು.
  7. ಗ್ರೂಪ್‌ ‘ಸಿ’ ಮತ್ತು ‘ಡಿ’ ವೃಂದದ ನೌಕರರಿಗೆ ಹಾಲಿ ಇರುವ ಜಿ.ಐ.ಎಸ್. ಮಾಸಿಕ ವಂತಿಗೆಯನ್ನು 100% ಕ್ಕೆ ಹೆಚ್ಚಳ ಮತ್ತು ಗ್ರೂಪ್ ‘ಎ’ ಮತ್ತು ‘ಬಿ’ ವೃಂದಕ್ಕೆ 50% ಹೆಚ್ಚಿಸಲು ಶಿಫಾರಸ್ಸು.
  8. ಭಾರತ ಸರ್ಕಾರವು ತನ್ನ ನೌಕರರಿಗೆ ಮುಂದೆ ವೇತನ ಪರಿಷ್ಕರಿಸಿದಾಗ ಕೇಂದ್ರ ವೇತನ ರಚನೆಯ ಆಧಾರದ ಮೇಲೆ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಕೇಂದ್ರ ಮಾದರಿಯ ವೇತನ ನೀಡಲು ಶಿಫಾರಸ್ಸು.
  9. ಪರಿಷ್ಕರಣೆಯಿಂದ ಹೆಚ್ಚಳವಾಗುವ ಮೂಲ ವೇತನಕ್ಕೆ ಮನೆ ಬಾಡಿಗೆ ಭತ್ಯೆಗಳನ್ನು ಕ್ರಮವಾಗಿ ‘ಎ’ ವರ್ಗದ ನಗರಗಳಿಗೆ ಶೇ.20%, ‘ಬಿ’ ವರ್ಗದ ನಗರಗಳಿಗೆ ಶೇ.15%, ‘ಸಿ’ ವರ್ಗದ ಪ್ರದೇಶಗಳಿಗೆ ಶೇ.7.5% ಶಿಫಾರಸ್ಸು.
  10. ಪರಿಷ್ಕರಣೆಯಿಂದ ಹೆಚ್ಚಳವಾಗುವ ಮೂಲ ವೇತನಕ್ಕೆ ನಗರ ಪರಿಹಾರ ಭತ್ಯೆಗಳನ್ನು ಕ್ರಮವಾಗಿ ‘ಎ’ ಮತ್ತು ‘ಬಿ’ ವೃಂದದ ನೌಕರರಿಗೆ ರೂ.600/- ರಿಂದ ರೂ.900/-ಕ್ಕೆ ಮತ್ತು ‘ಸಿ ಮತ್ತು ‘ಡಿ’ ವೃಂದದ ನೌಕರರಿಗೆ ರೂ.500/- ರಿಂದ ರೂ.750/- ಹೆಚ್ಚಳ.
  11. ಗ್ರೂಪ್ ‘ಡಿ’ ಮತ್ತು ‘ಸಿ’ ವೃಂದದ ನೌಕರರಿಗೆ ಹಾಲಿ ಇದ್ದಂತಹ ವೈದ್ಯಕೀಯ ಭತ್ಯೆ ರೂ.200/- ರಿಂದ ರೂ.500/-ಕ್ಕೆ ಹೆಚ್ಚಳ.
  12. ಸಮವಸ್ತ್ರ ಭತ್ಯೆ, ನಿಗದಿತ ಪ್ರಯಾಣ ಭತ್ಯೆ, ಸಾಗಣೆ ಭತ್ಯೆ, ದಿನಭತ್ಯೆ ಮತ್ತು ವರ್ಗಾವಣೆ ಅನುದಾನವನ್ನು ಹಾಲಿ ಇರುವ ದರಗಳಿಗೆ ಶೇ.25% ಹೆಚ್ಚಳ.
  13. ವಿಕಲಚೇತನ ನೌಕರರಿಗೆ ಹಲವಾರು ಭತ್ಯೆಗಳು ಮತ್ತು ಸೌಲಭ್ಯಗಳನ್ನು ಹೆಚ್ಚಳಕ್ಕೆ ಶಿಫಾರಸ್ಸು.
  14. ನಾಲ್ಕು ಚಕ್ರ ವಾಹನ ಖರೀದಿ ಮುಂಡವನ್ನು ರೂ.3.00 ಲಕ್ಷದಿಂದ ರೂ.6.00 ಲಕ್ಷಕ್ಕೆ ಹಾಗೂ ದ್ವಿ-ಚಕ್ರ ವಾಹನಕ್ಕೆ ರೂ.50,000/- ರಿಂದ ರೂ. 80,000/-ಗಳಿಗೆ ಹೆಚ್ಚಳ.
  15. ನೌಕರರ ಸೇವಾವಧಿಯಲ್ಲಿ ಮೂರು ಭಾರಿ ಎಲ್.ಟಿ.ಸಿ. ಸೌಲಭ್ಯಕ್ಕೆ ಅವಕಾಶ.
  16. ಸರ್ಕಾರಿ ಸೇವೆಗೆ ಸೇರುವ 2 ತಿಂಗಳ ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ ನವಜಾತ ಶಿಶುವಿನ ಹಾರೈಕೆಗಾಗಿ 18 ವಾರಗಳ ಹೆರಿಗೆ ರಜೆಗೆ ಶಿಫಾರಸ್ಸು.
  17. ಕೆಲಸ ವಿರಾಮ ಸಮತೋಲನವನ್ನು ಸುಧಾರಿಸಲು ಹಾಗೂ ಸರ್ಕಾರಿ ನೌಕರರ ಕೆಲಸದ ಗುಣಮಟ್ಟವನ್ನು ಹೆಚ್ಚಿಸಲು ವಾರದ ಐದು ದಿನಗಳ ಕೆಲಸದ ಅವಧಿಯನ್ನು ಪರಿಚಯಿಸಲು ತಿಫಾರಸ್ಸು.
  18. ಈ ಮೇಲ್ಕಂಡ ಎಲ್ಲಾ ಸೌಲಭ್ಯಗಳು ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ ರೀತಿಯಲ್ಲಿಯೇ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಅನ್ವಯಗೊಳಿಸಲು ಶಿಫಾರಸ್ಸು.
  19. ಮಾಸಿಕ ಪಿಂಚಣಿಯ ಪ್ರಮಾಣವು ಅಂತಿಮ ಮೂಲ ವೇತನದ 50% ರಷ್ಟು ಹಾಗೂ ಕುಟುಂಬ ಪಿಂಚಣಿಯು 30% ಮುಂದುವರೆದು, ಕನಿಷ್ಠ ಪಿಂಚಣಿ ರೂ.13,500/- ಹಾಗೂ ಗರಿಷ್ಠ ಪಿಂಚಣಿ ರೂ.1,20,600/-ಕ್ಕೆ ಪರಿಷ್ಕರಣೆಗೆ ಶಿಫಾರಸ್ಸು.
  20. 70-80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಹೆಚ್ಚುವರಿ 10% ರಷ್ಟು ಶಿಫಾರಸ್ಸು.
  21. ಪಿಂಚಣಿದಾರರಿಗೆ ‘ಸಂಧ್ಯಾಕಿರಣ’ ಎಂಬ ಆರೋಗ್ಯ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಶಿಫಾರಸ್ಸು ಮಾಡಿದೆ. ಅಲ್ಲಿಯವರೆಗೆ ಮಾಸಿಕ ರೂ. 500/-ಗಳ ವೈದ್ಯಕೀಯ ಭತ್ಯೆ ನೀಡಲು ಶಿಫಾರಸ್ಸು ಮಾಡುತ್ತದೆ.
  22. ಪಿಂಚಣಿದಾರರು ಮರಣ ಹೊಂದಿದಲ್ಲಿ ರೂ.10,000/-ಗಳ ಶವಸಂಸ್ಕಾರ ಮೊತ್ತವನ್ನು ನೀಡಲು ಶಿಫಾರಸ್ಸು.

ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಸರ್ಕಾರದ ಆದೇಶ ಸಂಖ್ಯೆ: ಆಇ 21 ಎಸ್ಆರ್‌ಪಿ 2024, ದಿ:22-07-2024ರನ್ವಯ 7ನೇ ರಾಜ್ಯ ವೇತನ ಅಯೋಗವು ಶಿಫಾರಸ್ಸು ಮಾಡಿರುವ ಮುಖ್ಯ ವೇತನ ಶ್ರೇಣಿ ಮತ್ತು ಪರಿಸ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ಅಂಗೀಕರಿಸಿ, ದಿ:01/07/2022ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಿತು.

ಅದರಂತೆ, ಈ ಆದೇಶದಲ್ಲಿ ಆಯೋಗದ ಸಂಪುಟ-1 ರ ವರದಿಯಲ್ಲಿನ ಈ ಕೆಳಗಂಡ ಶಿಫಾರಸ್ಸುಗಳನ್ನು ಅಂಗೀಕರಿಸಿ ಅನುಷ್ಠಾನಗೊಳಿಸಿತು

1)

  ದಿ:01-07-2022 ರಲ್ಲಿದ್ದಂತಹ ಮೂಲ ವೇತನ,

  ದಿ:01-07-2022 ರಲ್ಲಿದ್ದಂತಹ 31% ತುಟ್ಟಿಭತ್ಯೆ ಹಾಗೂ

  27.50% ರಷ್ಟು ಫಿಟ್‌ಮೆಂಟ್‌ ಸೌಲಭ್ಯ.

ಮೇಲಿನ ಈ ಮೂರನ್ನು ಒಟ್ಟುಗೂಡಿಸಿ ಲೆಕ್ಕ ಹಾಕಿದಾಗ ಬರುವ ಮೊತ್ತದ ನಂತರದ ಹಂತದಲ್ಲಿ ವೇತನವನ್ನು ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸಿತು.

ಉದಾಹರಣೆಗೆ :

ದಿ:01-07-2022 ರಲ್ಲಿ ಒಬ್ಬ ನೌಕರನ ಮೂಲ ವೇತನವು ರೂ.21,400/- ಇತ್ತು ಎಂದು ಇಟ್ಟುಕೊಳ್ಳಿ,

ಆಗ ಇದ್ದಂತಹ ತುಟ್ಟಿಭತ್ಯೆ 31% (ಅಂದರೆ ರೂ.6,634/-) ಮತ್ತು

27.50% ರಷ್ಟು ಫಿಟ್‌ಮೆಂಟ್‌ ಸೌಲಭ್ಯ (ಅಂದರೆ ರೂ.5,885/-)

ಮೇಲಿನ ಈ ಮೂರನ್ನು ಒಟ್ಟುಗೂಡಿಸಿದಾಗ ರೂ.33,919/- ಆಗುತ್ತದೆ. ಇದನ್ನು ಮುಂದಿನ ಹಂತಕ್ಕೆ ರೂ.34,100/- ಈ ಮೊತ್ತವು ನೌಕರನ ಮೂಲ ವೇತನ ಆಗುತ್ತದೆ. ಅಂದರೆ ರೂ.21,400/- ಗಳನ್ನು ಮೂಲವೇತನವಾಗಿ ಪಡಿಯುತ್ತಿದ್ದ ನೌಕರನು ತದನಂತರದಿಂದ ರೂ.34,100/- ಗಳನ್ನು ಮೂಲ ವೇತನವಾಗಿ ಪಡೆಯುತ್ತಾನೆ.

ಇದೇ ರೀತಿಯಾಗಿ ವಿವಿಧ ಮೂಲ ವೇತನವನ್ನು ಹೊಂದಿರುವ ನೌಕರರಿಗೆ ಅವರವರ ಮೂಲ ವೇತನಕ್ಕೆ ಅನುಸಾರವಾಗಿ ವಿವಿಧ ಹೊಸ ಮೂಲವೇತನಗಳು ನಿಗದಿಗೊಳಿಸಲಾಯಿತು.

-> ಈ ಆದೇಶದ ಪ್ರಕಾರ ದಿ:01-07-2022 ರಿಂದ ಮೂಲವೇತನವನ್ನು ತಿದ್ದುಪಡಿಗೊಳಿಸಿ ನಿಗದಿಪಡಿಸಿದರೂ ಕೂಡ ನೌಕರರಿಗೆ ಈ ಪರಿಷ್ಕೃತ ವೇತನ ಶ್ರೇಣಿಗಳ (7th pay committee pay scales) ಆರ್ಥಿಕ ಸೌಲಭ್ಯವು ದಿ:01-08-2024 ರಿಂದ ಪಾಪ್ತವಾಗುತ್ತದೆ.

-> ಅಂದರೆ ಕೇವಲ ಕಾಲ್ಪನಿಕವಾಗಿ ದಿ:01-07-2022 ರಿಂದ ಹೊಸ ಮೂಲವೇತನವನ್ನು ನಿಗದಿಗೊಳಿಸಲಾಯಿತು. ದಿ:01-08-2024 ರಿಂದ ಮಾತ್ರ ನೌಕರರಿಗೆ ಈ ಹೊಸ ಮೂಲ ವೇತನದ ಸಂಬಳ ಲಭಿಸಿತು. ಇದರಿಂದ ದಿ:01-07-2022ರಿಂದ ದಿ:31-07-2024ರವರೆಗಿನ ನೌಕರರಿಗೆ ಬರಬೇಕಾದ ಹೊಸ ಮೂಲ ವೇತನದ ಹೆಚ್ಚುವರಿ ಸಂಬಳವು (ಆರ್ಥಿಕ ಸೌಲಭ್ಯವು) ಬರುವುದಿಲ್ಲ.

 

2) ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳ ಪರಿಷ್ಕರಣೆ ಕುರಿತಂತೆ ಆಯೋಗದ ಶಿಫಾರಸ್ಸುಗಳನ್ನು ಸರ್ಕಾರವು ಅಂಗೀಕರಿಸಿತು. ಅದರಂತೆ, ಕನಿಷ್ಠ ಪಿಂಚಣಿಯ ಮೊತ್ತವನ್ನು ಮಾಸಿಕ ರೂ.8,500/- ರಿಂದ ರೂ.13,500/- ಕ್ಕೆ ಹಾಗೂ ಗರಿಷ್ಠ ಪಿಂಚಣಿಯ ಮೊತ್ತವನ್ನು ಮಾಸಿಕ ರೂ.75,300/- ರಿಂದ ರೂ.1,20,600/-ಗಳಿಗೆ ಮತ್ತು ಸಂವಾದಿ ಕುಟುಂಬ ಪಿಂಚಣಿಯ ಕನಿಷ್ಠ ಮಿತಿಯನ್ನು ಮಾಸಿಕ ರೂ.8,500/- ರಿಂದ ರೂ.13,500/- ಹಾಗೂ ಗರಿಷ್ಠ ಮಿತಿಯನ್ನು ಮಾಸಿಕ ರೂ.75,300/- ರಿಂದ ರೂ.1,20,600/-ಗಳಿಗೆ ಪರಿಷ್ಕರಿಸಿತು. ಈ ಪರಿಷ್ಕರಣೆಗಳು ದಿ:01-07-2022 ರಿಂದ ಜಾರಿಗೆ ಬಂದರೂ ಕೂಡ ಆರ್ಥಿಕ ಲಾಭವು ದಿ:01-08-2024ರಿಂದ ಪ್ರಾಪ್ತವಾಯಿತು.

 

3) ಆಯೋಗವು ಶಿಫಾರಸ್ಸು ಮಾಡಿದ್ದ ಪರಿಷ್ಕೃತ ಮನೆ ಬಾಡಿಗೆ ಭತ್ಯೆ (HRA), ನಗರ ಪರಿಹಾರ ಭತ್ಯೆ (CCA), ವೈದ್ಯಕೀಯ ಭತ್ಯೆ, ಮತ್ತು ಪರಿಷ್ಕೃತ ತುಟ್ಟಿಭತ್ಯೆ ಲೆಕ್ಕಾಚಾರಗಳನ್ನು ಸರ್ಕಾರವು ಅಂಗೀಕರಿಸಿತು.

 

4) ಆಯೋಗವು ಶಿಫಾರಸ್ಸು ಮಾಡಿದ್ದ ನೌಕರರ ಸಾಮೂಹಿಕ ವಿಮಾ ಯೋಜನೆ(EGIS)ಯ ವಂತಿಗೆ ಪರಿಷ್ಕರಣೆಯನ್ನು ಸರ್ಕಾರವು ಅಂಗೀಕರಿಸಿತು.

 

5) 7ನೇ ರಾಜ್ಯ ವೇತನ ಆಯೋಗದ ವರದಿ ಅನುಷ್ಠಾನ ಮಾಡುವ ತನಕ ತಾತ್ಕಾಲಿಕ ಪರಿಹಾರ ಭತ್ಯೆಯಾಗಿ ಕೊಡಲು ಈ ಹಿಂದೆ ಆದೇಶಿಸಿದ್ದ ಮೂಲ ವೇತನದ 17% ಮಧ್ಯಂತರ ಪರಿಹಾರವನ್ನು ದಿ:31/07/2024ಕ್ಕೆ ಕೊನೆಗೊಳಸಲಾಯಿತು.

ಕರ್ನಾಟಕ ರಾಜ್ಯ ಸರ್ಕಾರವು ಸಂಖ್ಯೆ: ಆಇ 21 ಎಸ್ಆರ್‌ಪಿ 2024, ದಿ:17-08-2024ರನ್ವಯ ಕರ್ನಾಟಕ ನಾಗರಿಕ ಸೇವಾ(ಪರಿಷ್ಕೃತ ವೇತನ) ನಿಯಮಗಳು, 2024 ಎಂಬ ಅಧಿಸೂಚನೆಯನ್ನು ಹೊರಡಿಸಿತು.

7ನೇ ರಾಜ್ಯ ವೇತನ ಅಯೋಗವು ಶಿಫಾರಸ್ಸು ಮಾಡಿದ ಪರಿಷ್ಕೃತ ವೇತನ ಶ್ರೇಣಿಗಳನ್ನು ನೌಕರರಿಗೆ ಜಾರಿಗೆ ತರುವ ಉದ್ದೇಶದಿಂದ ಈ ಅಧಿಸೂಚನೆಯನ್ನು ಹೊರಡಿಸಲಾಯಿತು.

ಸರ್ಕಾರಿ ಆದೇಶ ಸಂಖ್ಯೆ: ಆಇ 21 ಎಸ್ಆರ್‌ಪಿ 2024, ದಿ:23-08-2024ರನ್ವಯ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗದಿ, ಪಿಂಚಣಿ ಪರಿಷ್ಕರಣೆ ಮತ್ತು ವೇತನ ಸಂಬಂಧಿತ ಭತ್ಯೆಗಳ ಪರಿಷ್ಕರಣೆ ಕುರಿತಂತೆ ವಿಸ್ತೃತವಾದ ಆದೇಶಗಳನ್ನು ಸರ್ಕಾರವು ಹೊರಡಿಸಿತು.

1) ತುಟ್ಟಿಭತ್ಯೆ:

ದಿ:01-07-2022 ರಂದು ಲಭ್ಯವಿದ್ದ ಸರ್ಕಾರಿ ನೌಕರನ ತುಟ್ಟಿಭತ್ಯೆ(DA)ಯನ್ನು ಅಗಿದ್ದ ಮೂಲ ವೇತನ(basic pay)ದೊಂದಿಗೆ ವಿಲೀನಗೊಳಿಸಿ ಪರಿಷ್ಕೃತ ಮೂಲ ವೇತನ (new basic pay)ವನ್ನು ಕಾಲ್ಪನಿಕವಾಗಿ ರಚಿಸಲಾಗಿರುತ್ತದೆ. ಆದ್ದರಿಂದ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರವು ದಿ:01-01-2023 ರಿಂದ ಅನ್ವಯವಾಗುವಂತೆ ಮಂಜೂರು ಮಾಡುವ ತುಟ್ಟಿಭತ್ಯೆಯ ಪ್ರತಿ ಶೇಕಡಾ 1ಕ್ಕೆ 0.722 ಗುಣಾಂಕವನ್ನು (multiplication factor) ಅನ್ವಯಿಸಿ ಲೆಕ್ಕಹಾಕಿ ಪಾವತಿಸಲಾಗುತ್ತದೆ.

ಆದ್ದರಿಂದ ಪರಿಷ್ಕೃತ ವೇತನ ಶ್ರೇಣಿಯಲ್ಲಿ ತುಟ್ಟಿಭತ್ಯೆಯನ್ನು ಕಾಲ್ಪನಿಕವಾಗಿ ಈ ಕೆಳಕಂಡಂತೆ ಕ್ರಮಬದ್ಧಗೊಳಿಸಿತು.

            01.07.2022       –           ಶೂನ್ಯ

            01.01.2023       –           ಪರಿಷ್ಕೃತ ಮೂಲ ವೇತನದ 2.75%

            01.07.2023       –           ಪರಿಷ್ಕೃತ ಮೂಲ ವೇತನದ 5.5%

            01.01.2024       –           ಪರಿಷ್ಕೃತ ಮೂಲ ವೇತನದ 8.5%

ಅಂದರೆ ದಿ:01-01-2024 ರಿಂದ ತುಟ್ಟಿಭತ್ಯೆಯು ಮೂಲ ವೇತನದ 8.5% ಆಗುತ್ತದೆ.

2) ಮನೆ ಬಾಡಿಗೆ ಭತ್ಯೆ:

ದಿ:01-08-2024 ರಿಂದ ಆರ್ಥಿಕ ಸೌಲಭ್ಯ ಅನ್ವಯಿಸುವಂತೆ ವಿವಿಧ ವರ್ಗದ ಪ್ರದೇಶಗಳಿಗೆ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಮನೆ ಬಾಡಿಗೆ ಭತ್ಯೆಯ ದರಗಳನ್ನು ಈ ಕೆಳಗಿನ ಕೋಷ್ಠಕದಲ್ಲಿ ನಮೂದಿಸಿರುವಂತೆ ಪರಿಷ್ಕರಿಸಲಾಯಿತು.

ಜನಸಂಖ್ಯೆ

ವರ್ಗೀಕರಣ

ಮನೆ ಬಾಡಿಗೆ ಭತ್ಯೆಯ ದರಗಳು

(1)

(2)

(3)

25 ಲಕ್ಷ ಮತು ಅದಕ್ಕೂ ಹೆಚ್ಚು

ಮೂಲ ವೇತನದ 20%

5 ಲಕ್ಷ ಮತು ಅದಕ್ಕೂ ಹೆಚ್ಚು ಆದರೆ 25 ಲಕ್ಷ ಮೀರದಂತೆ

ಬಿ

ಮೂಲ ವೇತನದ 15%

5 ಲಕ್ಷಕ್ಕಿಂತ ಕಡಿಮೆ

ಸಿ

ಮೂಲ ವೇತನದ 7.5%

3) ನಗರ ಪರಿಹಾರ ಭತ್ಯೆ:

ದಿ:01-08-2024 ರಿಂದ ಆರ್ಥಿಕ ಸೌಲಭ್ಯ ಅನ್ವಯಿಸುವಂತೆ ವಿವಿಧ ನಗರಗಳು/ಪಟ್ಟಣಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ವರ್ಗದ ಸರ್ಕಾರಿ ನೌಕರರಿಗೆ ನಗರ ಪರಿಹಾರ ಭತ್ಯೆಯ ದರಗಳನ್ನು ಈ ಕೆಳಗಿನ ಕೋಷ್ಠಕದಲ್ಲಿ ನಮೂದಿಸಿರುವಂತೆ ಪರಿಷ್ಕರಿಸಲಾಯಿತು.

ನಗರ/ಇತರ ಸ್ಥಳಗಳು

ಸರ್ಕಾರಿ ನೌಕರನು ಸೇರಿದ ಗುಂಫು

ನಗರ ಪರಿಹಾರ ಭತ್ಯೆಯ ದರಗಳು

(1)

(2)

(3)

ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆ

ಎ & ಬಿ

ಸಿ & ಡಿ

ರೂ.900/-

ರೂ.750/-

ಬೆಳಗಾಂ (ಯು.ಎ),

ಹುಬ್ಬಳ್ಳಿ-ಧಾರವಾಡ,

ಮಂಗಳೂರು (ಯು,ಎ),

ಮೈಸೂರು(ಯು.ಎ), ಕಲಬುರಗಿ

ಎ & ಬಿ

ಸಿ & ಡಿ

ರೂ.700/-

ರೂ.600/-

4) ಸಾಮೂಹಿಕ ವಿಮಾ ಯೋಜನೆ(EGIS)ಯ ವಂತಿಗೆ

ನೌಕರರ ಸಾಮೂಹಿಕ ವಿಮಾ ಯೋಜನೆ (EGIS)ಯ ವಂತಿಗೆಯನ್ನು ಈ ಕೆಳಗಿನಂತೆ ಪರಿಷ್ಕರಿಸಲಾಯಿತು.

ಪ್ರಸ್ತುತ ವಂತಿಗೆ (EGIS) (ರೂ.ಗಳಲ್ಲಿ)

ಪರಿಷ್ಕೃತ ವಂತಿಗೆ (ರೂ.ಗಳಲ್ಲಿ)

(1)

(2)

120

240

240

480

360

540

480

720

ಈ ಪರಿಷ್ಕೃತ EGIS ವಂತಿಗೆಯ ಕಟಾವಣೆ ದಿನಾಂಕವನ್ನು ತಿಳಿಸಲು ಪ್ರತ್ಯೇಕ ಆದೇಶವನ್ನು ಹೊರಡಿಸಲಾಗುವುದು ಎಂದು ಸರ್ಕಾರವು ತಿಳಿಸಿತು.

ಗ್ರೂಪ್‌ -ʼಸಿʼ ಮತ್ತು ಗ್ರೂಪ್‌ -ʼಡಿʼ ವೃಂದದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 7ನೇ ರಾಜ್ಯ ವೇತನ ಅಯೋಗವು ಶಿಫಾರಸ್ಸು ಮಾಡಿದ ವೈದ್ಯಕೀಯ ಭತ್ಯೆಯ ದರಗಳನ್ನು ಪರಿಷ್ಕರಿಸಲು ಸರ್ಕಾರವು ಸಂಖ್ಯೆ: ಆಇ 21 ಎಸ್ಆರ್‌ಪಿ 2024(1), ದಿ:27-08-2024ರನ್ವಯ ಈ ಆದೇಶವನ್ನು ಹೊರಡಿಸಿತು.

ಅದರಂತೆ, ಈ ಮೊದಲಿದ್ದ ವೈದ್ಯಕೀಯ ಭತ್ಯೆಯ ದರ ಮಾಸಿಕ ರೂ.200/-ಗಳಿಂದ ಮಾಸಿಕ ರೂ.500/-ಗಳಿಗೆ ಹೆಚ್ಚಿಸಿ ದಿ:01-08-2024ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿತು.

ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ(ಕೆ.ಎ.ಎಸ್‌.ಎಸ್‌) ಸೌಲಭ್ಯವು ಅನುಷ್ಙಾನಗೊಳ್ಳುವವರೆಗೆ ಈ ವೈದ್ಯಕೀಯ ಸೌಲಭ್ಯವು ಲಭ್ಯವಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಿತು.

ಹೆಚ್ಚಿನ ಮಾಹಿತಿಗಾಗಿ  ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಅಧಿಕೃತ ಅಂತರ್ಜಾಲತಾಣವನ್ನು ವೀಕ್ಷಿಸಿ.  www.finance.karnataka.gov.in

Scroll to Top