
ಪ್ರೀತಿಪಾತ್ರರ ಜೊತೆ ನಮ್ಮ ಜೀವನದಲ್ಲಿ ವಿಶೇಷ ಕ್ಷಣಗಳು ಮತ್ತು ಭಾವನೆಗಳನ್ನು ಆನಂದಿಸಲು ಹಬ್ಬಗಳು ನಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಆದಾಗ್ಯೂ, ಆರ್ಥಿಕ ಅಡಚಣೆಗಳು ಕೆಲವೊಮ್ಮೆ ಜನರಿಗೆ ಹಬ್ಬಗಳನ್ನು ಸಂಪೂರ್ಣವಾಗಿ ಆಚರಿಸಲು ತಡೆಯಾಗಬಹುದು.
ಈ ರೀತಿಯ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು, ಕರ್ನಾಟಕ ಸರ್ಕಾರವು ನೌಕರರಿಗೆ ಹಬ್ಬದ ಮುಂಗಡ ಹಣ ಸೌಲಭ್ಯವನ್ನು ಪರಿಚಯಿಸಿತು.
ಈ ಸೌಲಭ್ಯವು ಅರ್ಹ ಸರ್ಕಾರಿ ನೌಕರರಿಗೆ ಆರ್ಥಿಕ ನೆರವನ್ನು ನೀಡುತ್ತದೆ, ಇದರಿಂದ ಅವರು ಹಬ್ಬ ಸಂಬಂಧಿತ ವೆಚ್ಚಗಳನ್ನು ಸರಾಗವಾಗಿ ನಿರ್ವಹಿಸಬಹುದು.

ಈ ಲೇಖನದಲ್ಲಿ ಕರ್ನಾಟಕ ಆರ್ಥಿಕ ಸಂಹಿತೆ, 1958 (Karnataka Financial Code,1958)ರ ಅನುಚ್ಛೇದ 238(1)ರಲ್ಲಿ ವಿವರಿಸಿರುವ ಹಬ್ಬದ ಮುಂಗಡ ಸೌಲಭ್ಯದ ಅರ್ಹತೆ ಮಾನದಂಡಗಳು, ಷರತ್ತುಗಳು ಮತ್ತು ನೌಕರರಿಗೆ ಸಿಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ.
Table of Contents
ಈ ಸೌಲಭ್ಯವನ್ನು ಯಾರು ಪಡೆಯಬಹುದು?
- ಸರ್ಕಾರಿ ನೌಕರರು,
- ಕರ್ನಾಟಕ ಐಎಎಸ್/ಐಪಿಎಸ್/ಐಎಫ್ಎಸ್ ಶ್ರೇಣಿಯಲ್ಲಿ ನಿಯೋಜಿತರಾಗಿರುವ ಅಖಿಲಭಾರತ ಸೇವೆಗೆ ಸೇರಿದ ಅಧಿಕಾರಿಗಳು.
- ಸ್ಥಳೀಯ ಅಭ್ಯರ್ಥಿಗಳು, ಆದರೆ ಇವರು ಖಾಯಂ ಸರ್ಕಾರಿ ನೌಕರನ ಜಾಮೀನನ್ನು ಒದಗಿಸಬೇಕು.
ಮುಂಗಡವಾಗಿ ಸಿಗುವ ಹಣದ ಮೊತ್ತ:
ನೌಕರನ ಮೂಲ ವೇತನದ (basic pay) 75% ಅಥವಾ ರೂ.25,000/- ಇದರಲ್ಲಿ ಯಾವ ಮೊತ್ತ ಕಡಿಮೆಯೋ ಅದು ದೊರಕುತ್ತದೆ.
ಒಂದು ವೇಳೆ ಮೂಲ ವೇತನದ 75% ಗೆ ಲೆಕ್ಕಹಾಕಿದರೆ, ಇದನ್ನು ಹತ್ತಿರದ 10 ರೂಪಾಯಿಯ ಗುಣಕದ ಪೂರ್ಣಾಂಕಕ್ಕೆ ತರಬೇಕು.
ಇದಕ್ಕೆ ಸಂಬಂಧಿಸಿದ ಸರ್ಕಾರದ ಆದೇಶದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಡೌನ್ಲೋಡ್ ಬಟನ್ ಅನ್ನು ಕ್ಲಿಕ್ ಮಾಡಿ.
ಉದಾಹರಣೆಗೆ 1: ನೌಕರನ ಮೂಲ ವೇತನ (basic pay) ರೂ.27,000/- ಇದ್ದರೆ, ಇವರಿಗೆ ಮೂಲ ವೇತನದ 75% ಅಂದರೆ ರೂ.20,250/- ಮಾತ್ರ ಹಬ್ಬದ ಮುಂಗಡ ಹಣವಾಗಿ ದೊರೆಯುತ್ತದೆ. ಇವರಿಗೆ ರೂ.25,000/- ದೊರಕುವುದಿಲ್ಲ.
ಉದಾಹರಣೆಗೆ 2: ನೌಕರನ ಮೂಲ ವೇತನ (basic pay) ರೂ.37,500/- ಇದ್ದರೆ, ಇವರಿಗೆ ಮೂಲ ವೇತನದ 75% ಅಂದರೆ ರೂ.28,125/- ದೊರಕುವುದಿಲ್ಲ. ಇವರಿಗೆ ಗರಿಷ್ಠ ರೂ.25,000/- ಮಾತ್ರ ದೊರಕುತ್ತದೆ.
- ಹಬ್ಬದ ಮುಂಗಡವಾಗಿ ಪಡೆಯುವ ಹಣಕ್ಕೆ ಯಾವುದೇ ಬಡ್ಡಿಯನ್ನು ವಿಧಿಸುವುದಿಲ್ಲ. ಕೇವಲ ಅಸಲನ್ನು ಮಾತ್ರ ಮರುಪಾವತಿಸಬೇಕು.
ಯಾವ ಯಾವ ಹಬ್ಬಗಳಿಗೆ ಮುಂಗಡ ಹಣ ಕೊಡಲಾಗುತ್ತದೆ?
ಈ ಕೆಳಗೆ ನಮೂದಿಸಿರುವ ಹಬ್ಬಗಳಿಗೆ ಹಬ್ಬದ ಮುಂಗಡ ಹಣ ಮಂಜೂರು ಮಾಡಲಾಗುತ್ತದೆ.
ಯುಗಾದಿ, ಮಕರ ಸಂಕ್ರಾಂತಿ, ದಸರಾ, ಗಣೇಶ ಚತುರ್ಥಿ, ದೀಪಾವಳಿ, ರಂಜಾನ್, ಬಕ್ರೀದ್, ಈದ್-ಎ-ಮಿಲಾದ್, ಕ್ತಿಸ್ಮಸ್, ಈಸ್ಟರ್, ಸ್ವಾತಂತ್ರ್ಯ ದಿನ ಮುಂತಾದ ಪ್ರಮುಖ ಹಬ್ಬಗಳು.


ಈ ಉದ್ದೇಶಕ್ಕಾಗಿ ಹಬ್ಬಗಳನ್ನು ಗೊತ್ತುಪಡಿಸುವ ಅಧಿಕಾರವು ಇಲಾಖಾ ಮುಖ್ಯಸ್ಥರಿಗೆ ಇರುತ್ತದೆ.
ಷರತ್ತುಗಳು:
- ಮುಂಗಡ ಹಣವನ್ನು ತೆಗೆಯುವ ಸಮಯದಲ್ಲಿ ಕರ್ತವ್ಯದ ಮೇಲೆ ಇರುವ ಅಥವಾ ಪೂರ್ಣ/ಸರಾಸರಿ ವೇತನದ ರಜೆಯ ಮೇಲಿರುವ ಅಥವಾ ಪ್ರಸೂತಿ ರಜೆಯ ಮೇಲಿರುವ ನೌಕರರಿಗೆ ಮಾತ್ರ ಈ ಸೌಲಭ್ಯ ದೊರೆಯುತ್ತದೆ.
- ಯಾವುದೇ ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಂದು ಸಲ ಮಾತ್ರ ಈ ಹಬ್ಬದ ಮುಂಗಡ ಸೌಲಭ್ಯವನ್ನು ಮಂಜೂರು ಮಾಡಲಾಗುತ್ತದೆ.
- ಈ ಮೊದಲು ಕೊಡಲಾದ ಹಬ್ಬದ ಮುಂಗಡ ಹಣವು ಪೂರ್ತಿಯಾಗಿ ಮರುಪಾವತಿಯಾದ ನಂತರವೇ ಹೊಸ ಹಬ್ಬದ ಮುಂಗಡ ಸೌಲಭ್ಯವನ್ನು ಮಂಜೂರು ಮಾಡಲಾಗುತ್ತದೆ.
- ಮುಂಗಡ ಹಣವನ್ನು ಪೂರ್ವ ಮಂಜೂರಾತಿಯೊಂದಿಗೆ ತೆಗೆಯಬೇಕು. ಹಬ್ಬಕ್ಕಿಂತ ಎರಡು ವಾರಗಳ ಮುಂಚೆ ಹಾಗೂ ಹಬ್ಬದ ದಿನದ ಅನಂತರ ಬಟವಾಡೆ ಮಾಡಬಾರದು.
ಅರ್ಜಿ ಸಲ್ಲಿಸುವ ವಿಧಾನ:
ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಆಡಳಿತ ವಿಭಾಗಕ್ಕೆ ಸಲ್ಲಿಸಬೇಕು.
ಹಬ್ಬದ ಮುಂಗಡ ಹಣ ಪಡೆಯಲು ಸಲ್ಲಿಸಬೇಕಾದ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಡೌನ್ಲೋಡ್ ಬಟನ್ ಅನ್ನು ಕ್ಲಿಕ್ ಮಾಡಿ.
ಹಬ್ಬದ ಮುಂಗಡವನ್ನು ಮಂಜೂರು ಮಾಡುವ ಅಧಿಕಾರಿ:
ಕಛೇರಿಯ ಮುಖ್ಯಸ್ಥರು ಈ ಹಬ್ಬದ ಮುಂಗಡವನ್ನು ಮಂಜೂರು ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ.
ಕಛೇರಿಯ ಮುಖ್ಯಸ್ಥರು ನಾನ್ ಗೆಜೆಟೆಡ್ ಸರ್ಕಾರಿ ನೌಕರರಾಗಿದ್ದರೆ, ಅವರು ಈ ಮುಂಗಡವನ್ನು ತಮಗೂ ಮಂಜೂರು ಮಾಡಿಕೊಳ್ಳಬಹುದು.
ಮರುಪಾವತಿಯ ವಿಧಾನ:
ಮುಂಗಡ ಹಣವನ್ನು 10 ಸಮಾನ ಮಾಸಿಕ ಕಂತುಗಳಲ್ಲಿ ವಸೂಲು ಮಾಡಲಾಗುತ್ತದೆ.
ಮುಂಗಡ ಹಣ ಪಡೆದ ತಿಂಗಳಿನ ನಂತರ ಬರುವ ತಿಂಗಳಿನಿಂದ ವೇತನದಲ್ಲಿ ಕಡಿತ ಪ್ರಾರಂಭವಾಗುತ್ತದೆ.
ಉದಾಹರಣೆಗೆ: ನೌಕರ ಸೆಪ್ಟೆಂಬರ್ 20 ರಂದು ಹಬ್ಬದ ಮುಂಗಡ ಹಣವನ್ನು ಪಡೆದಿದ್ದರೆ, ಸೆಪ್ಟೆಂಬರ್ ತಿಂಗಳ ವೇತನದಲ್ಲಿ ಬಿಟ್ಟು ಅಕ್ಟೋಬರ್ ತಿಂಗಳ ವೇತನವನ್ನು ಪಾವತಿಸುವ ಸಂದರ್ಭದಲ್ಲಿ ಮೊದಲನೇ ಕಂತನ್ನು ಕಡಿತಗೊಳಿಸಲಾಗುತ್ತದೆ.
ಹಬ್ಬದ ಮುಂಗಡ ಹಣ ಪಡೆಯಲು ಕೆ2 ಬಿಲ್ಲನ್ನು ತಯಾರಿಸುವ ವಿಧಾನ:
HRMS ಜಾಲತಾಣ(website)ದಲ್ಲಿ ಹಬ್ಬದ ಮುಂಗಡವನ್ನು Generate ಮಾಡಿ, Kajane2(ಕೆ2) ಜಾಲತಾಣಕ್ಕೆ ರವಾನಿಸಬೇಕು. ನಂತರ ಕೆ2 ನಲ್ಲಿ ಬಿಲ್ಲನ್ನು ತಯಾರಿಸಿ ಸಂಬಂಧಪಟ್ಟ ಖಜಾನೆ ಕಛೇರಿಗೆ ಸಲ್ಲಿಸಬೇಕು.
ಹಬ್ಬದ ಮುಂಗಡ ಸೌಲಭ್ಯವು, ಕರ್ನಾಟಕ ಸರ್ಕಾರದ ನೌಕರರಿಗೆ ಹಬ್ಬಗಳನ್ನು ಸಂತೋಷದಿಂದ ಆಚರಿಸಲು ಅವಕಾಶ ಮಾಡಿಕೊಡುತ್ತದೆ.
FAQ (frequently asked questions):
1) ಖಾಸಗಿ ನೌಕರರು ಈ ಸೌಲಭ್ಯವನ್ನು ಪಡೆಯಬಹದೇ?
ಖಾಸಗಿ ನೌಕರರಿಗೆ ಈ ಸೌಲಭ್ಯ ದೊರೆಯುವುದಿಲ್ಲ. ಈ ಸೌಲಭ್ಯವು ಕೇವಲ ಸರ್ಕಾರಿ ನೌಕರರಿಗೆ ಮಾತ್ರ ದೊರಕುತ್ತದೆ.
2) ಹಬ್ಬದ ಮುಂಗಡವಾಗಿ ಗರಿಷ್ಠ ಎಷ್ಟು ಮೊತ್ತವನ್ನು ಪಡೆಯಬಹುದು?
ಗರಿಷ್ಠ ರೂ.25,000/- ಗಳವರೆಗೆ ಮುಂಗಡ ವಾಗಿ ಪಡೆಯಬಹುದು.
3) ಹಬ್ಬದ ಮುಂಗಡವಾಗಿ ಪಡೆಯುವ ಹಣಕ್ಕೆ ಬಡ್ಡಿ ವಿಧಿಸಲಾಗುತ್ತದೆಯೇ?
ಯಾವುದೇ ಬಡ್ಡಿಯನ್ನು ವಿಧಿಸುವುದಿಲ್ಲ.
4) Probationary period ನಲ್ಲಿ ಇರುವ ಸರ್ಕಾರಿ ನೌಕರರು ಈ ಸೌಲಭ್ಯವನ್ನ ಪಡೆಯಬಹುದೇ?
ಪಡೆಯಬಹುದು.
5) ಮುಂಗಡ ಹಣವನ್ನು ಎಷ್ಟು ಕಂತುಗಳಲ್ಲಿ ವಸೂಲು ಮಾಡಲಾಗುತ್ತದೆ?
10 ಸಮಾನ ಮಾಸಿಕ ಕಂತುಗಳಲ್ಲಿ ವಸೂಲು ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಅಧಿಕೃತ ಅಂತರ್ಜಾಲ ತಾಣವನ್ನು ವೀಕ್ಷಿಸಿ. www.finance.karnataka.gov.in
ಕರ್ನಾಟಕ ಸರ್ಕಾರದ ತುಟ್ಟಿಭತ್ಯೆ ಆದೇಶಗಳನ್ನು Download ಮಾಡಿಕೊಳ್ಳಲು ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ.
7ನೇ ರಾಜ್ಯ ವೇತನ ಆಯೋಗಕ್ಕೆ ಸಂಬಂಧಿಸಿದ ಕರ್ನಾಟಕ ಸರ್ಕಾರದ ಆದೇಶಗಳನ್ನು Download ಮಾಡಿಕೊಳ್ಳಲು ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ.
ಕೆಪಿಎಸ್ಸಿ ಇಲಾಖಾ ಪರೀಕ್ಷೆಗಳು 2024 – ಪ್ರಥಮ ಅಧೀವೇಶನದ ಫಲಿತಾಂಶಗಳನ್ನು Download ಮಾಡಿಕೊಳ್ಳಲು ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ.